ಅಡ್ಡೂರು: ಜನರ ಮಧ್ಯೆ ಪರಸ್ಪರ ಕಲಹ ಉಂಟಾಗಿ ನಿಯಂತ್ರಣಕ್ಕೆ ಬಾರದೇ ಉಲ್ಬಣ ಸ್ಥಿತಿಗೆ ತಲುಪಿದರೆ ಸಮಾಜ ಉಳಿಯಲು ಸಾಧ್ಯವಿಲ್ಲ. ಘರ್ಷಣೆಯಿಂದ ಬದುಕಲು ಕಟ್ಟಿಕೊಳ್ಳಲು ಆಗುವುದಿಲ್ಲ. ಮತೀಯ ಭಾವನೆಯನ್ನು ಮನಸ್ಸಿನಿಂದ ದೂರವಿಟ್ಟು ಸೌಹಾರ್ದ ಬದುಕು ಅನಿವಾರ್ಯತೆ ಇದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ರೋಝ್ ಫ್ರೆಂಡ್ಸ್ ಕ್ಲಬ್ (ರಿ.) ಕಳಸಗುರಿ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ಇಲ್ಲಿನ ಕಳಸಗುರಿಯ ಮೈದಾನದಲ್ಲಿ ಆಯೋಜಿಸಿದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಬಳಿಕ ಅವರು ಮಾತನಾಡುತ್ತಿದ್ದರು.
“ಕ್ರೀಡೆ ಮನುಷ್ಯ ಮನುಷ್ಯನ ಮಧ್ಯೆ ಸಂಬಂಧವನ್ನು ಹೆಚ್ಚು ಮಾಡುತ್ತದೆ. ಕ್ರಿಕೆಟ್ ಪಂದ್ಯದಲ್ಲಿ ಜಾತಿ-ಧರ್ಮ ಮೀರಿ ಎಲ್ಲ ಸಮಾಜದವರು ಸೇರುತ್ತಾರೆ. ಜನರ ಮಧ್ಯೆ ಅಪನಂಬಿಕೆ, ಅವಿಶ್ವಾಸ ಹೆಚ್ಚಿರುವ ಈ ಕಾಲ ಘಟ್ಟದಲ್ಲಿ ನಾವೆಲ್ಲರೂ ಸೌಹಾರ್ದತೆಗೆ ಒತ್ತು ನೀಡಿ ಉಳಿಸುವ ಕಾರ್ಯ ಮಾಡಬೇಕು. ದೇಶದಲ್ಲಿ ಎಲ್ಲರೂ ಸೌಹಾರ್ದೆತೆಯಲ್ಲಿರಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಸಂದಿಗ್ಧ ಪರಿಸ್ಥಿಯನ್ನು ಕಾಣುವ ಸಂದರ್ಭ ಬರಬಹುದು” ಎಂದು ಕಳವಳ ವ್ಯಕ್ತಪಡಿಸಿದರು.
“ನಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಇನ್ನೊಂದು ಧರ್ಮಕ್ಕೆ ಗೌರವ ನೀಡುವ ಮೂಲಕ ಪ್ರೀತಿಯ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಯುವಕರು ಮಾಡಬೇಕು” ಎಂದು ಕಿವಿಮಾತು ಹೇಳಿದರು.
“ಅಡ್ಡೂರು ನನ್ನ ಹಳೆಯ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದಾಗಿದ್ದು, ಈ ಕ್ಷೇತ್ರದಿಂದ 4 ಬಾರಿ ಶಾಸಕನಾಗುವ ಅವಕಾಶ ನನಗೆ ಲಭಿಸಿದೆ. ಆರ್.ಎಫ್.ಸಿ ಕಳಸಗುರಿ ಸಂಸ್ಥೆ ಕಳೆದ 30 ವರ್ಷಗಳಿಂದ ಸಮಾಜ ಸೇವೆಯ ಜೊತೆಗೆ ಬಡ ಜನರಿಗೆ ಸಹಾಯ ಮಾಡುವ ಕೆಲಸ ಕಾರ್ಯಗಳನ್ನು ಮಾಡತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಸ್ಥೆ ತೀರ್ಮಾನಿಸಿದ್ದು, ಸರ್ಕಾರದಿಂದ ಸೌಲಭ್ಯ ಸಿಗುವುದಾದರೆ ಸಹಾಯ ಮಾಡಲು ನಾನು ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ನಡೆದ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಹಾಜಿ ಎಂ.ಎಚ್.ಹಾಜಿ ಮೊಹಿಯುದ್ದೀನ್ ಉದ್ಘಾಟಿಸಿದರು. ಆರ್.ಎಫ್.ಸಿ ಗೌರವಾಧ್ಯಕ್ಷ ಜಬ್ಬಾರ್ ಕಳಸಗುರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಗುರುಪುರ ಗ್ರಾ.ಪಂ. ಸದಸ್ಯ ಎ.ಕೆ.ರಿಯಾಝ್, ಡಾ.ಇ.ಕೆ.ಇ.ಸಿದ್ದೀಕ್, ಆರ್.ಎಫ್.ಸಿ ಸ್ಥಾಪಕಾಧ್ಯಕ್ಷ ಹಸನ್ ಬಾವ, ಗಂದಾಡಿ ಸೋಮನಾಥೇಶ್ವರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ರಾವ್ ನೂಯಿ ಮಾತನಾಡಿದರು.
ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ರವಿಶಂಕರ್ ರಾವ್ ನೂಯಿ, ಯು.ಪಿ.ಇಬ್ರಾಹಿಂ, ಅಡ್ಡೂರು ಆಂಬ್ಯುಲೆನ್ಸ್ ಚಾಲಕರಾದ ಹಬೀಬ್ ಸಲ್ಲಾಜೆ, ಫರಾನ್, ಸಂಸ್ಥೆಗಳಾದ ಅಡ್ಡೂರು ಸೆಂಟ್ರಲ್ ಕಮಿಟಿ, ಫೈವ್ ಸ್ಟಾರ್ ಅಡ್ಡೂರು, ಎಫ್.ಸಿ.ಕೆ ಕೆಳಗಿಕರೆ ಹಾಗೂ ರಾಜ್ಯ ಮಟ್ಟದ ರೋಪ್ ಸ್ಪರ್ಧೆಗೆ ಆಯ್ಕೆಗೊಂಡಿರುವ ಅಡ್ಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಬಿ.ಎಸ್.ಇಸ್ಮಾಯೀಲ್, ಆರ್.ಎಫ್.ಸಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಳಸಗುರಿ, ಪುತ್ತೂರು ಆದರ್ಶ್ ಫರ್ನಿಚರ್ಸ್ ಮಾಲಕ ಅಬ್ದುರ್ರಹ್ಮಾನ್, ಗುರುಪುರ ಗ್ರಾ.ಪಂ. ಉಪಾಧ್ಯಕ್ಷ ದಾವೂದ್ ಬಂಗ್ಲಗುಡ್ಡೆ, ಸದಸ್ಯರ ಎ.ಕೆ.ಅಶ್ರಫ್, ಅಡ್ಡೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ನಂದ್ಯ, ಉದ್ಯಮಿಗಳಾದ ಎ.ಕೆ.ಹಾರಿಸ್, ಶೇಖ್ ಮೋನು, ಇಬ್ರಾಹೀಂ ಬೊಟ್ಟಿಕೆರೆ, ನೌಫಲ್ ಕೋಡಿಬೆಟ್ಟು, ಶಮೀರ್ ನೂಯಿ, ಗುರುಪುರ ಗ್ರಾ.ಪಂ.ಮಾಜಿ ಸದಸ್ಯರಾದ ಆದಂ, ಕಳಸಗುರಿ ಕೆ.ಉಸ್ಮಾನ್ ಸ್ಟೋರ್ ಮುಖ್ಯಸ್ಥೆ ರುಕ್ಷಾನ, ಹಿರಿಯ ಸಲಹೆಗಾರ ಆಲಿಯಬ್ಬ ಕೋಡಿಬೆಟ್ಟು, ಕಳಸಗುರಿ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಭೋಜ ಮೂಲ್ಯ, ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಎ.ಎಸ್.ರಫೀಕ್, ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷ ಹಬೀಬ್ ಕಟ್ಟಪುಣಿ, ಎಫ್.ಸಿ.ಕೆ ಅಧ್ಯಕ್ಷ ಹಂಝ ಕೆಳಗಿನಕೆರೆ, ಕಾಂಜಿಲಕೋಡಿ ರೈಡರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುಭಾಷ್, ಐ20 ಗೈಸ್ ಅಧ್ಯಕ್ಷ ಕಮಲ್ ಕಾಂಜಿಲಕೋಡಿ ಮತ್ತಿತರರು ಉಪಸ್ಥಿತರಿದ್ದರು.


