ಮಂಗಳೂರು: ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ರೂವಾರಿ ಯು.ಶ್ರೀನಿವಾಸ ಮಲ್ಯರ 123ನೇ ಜನ್ಮದಿನಾಚರಣೆ ನಾಳೆ (ನ.21) ಸಂಜೆ 4:30ಕ್ಕೆ ಕದ್ರಿ ಜೋಗಿ ಮಠ ಸಮೀಪದ ಉಳ್ಳಾಲ ಶ್ರೀನಿವಾಸ ಮಲ್ಯ ಉದ್ಯಾವನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀನಿವಾಸ್ ಮಲ್ಯ ಜನ್ಮದಿನ ಆಚರಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಯು. ಶ್ರೀನಿವಾಸ ಮಲ್ಯರು ತನ್ನ ಪ್ರಭಾವೀ ರಾಜಕೀಯ ಹುದ್ದೆಯ ಸಾಮರ್ಥ್ಯವನ್ನು ಸ್ವಂತ ಲಾಭಕ್ಕೋ, ಸ್ವಸಮಾಜದ ಹಿತಕ್ಕೋ ಬಳಸಿಕೊಳ್ಳದೆ ತಾಯ್ನಾಡಿನ ಸರ್ವತೋಮುಖ ಅಭಿವೃದ್ಧಿಪಥ ನಿರ್ಮಾಣಕ್ಕಾಗಿ ವಿನಿಯೋಗಿಸಿದವರು. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಚಕ್ರವರ್ತಿ ರಾಜಗೋಪಾಲಾಚಾರಿಯವರಿಂದ ಹಿಡಿದು ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರೆಗೂ ಆಪ್ತವಲಯಲ್ಲಿದ್ದು, ಅವರ ಮೆಚ್ಚುಗೆ ಗಳಿಸಿದವರು. ಪಶ್ಚಿಮ ಕರಾವಳಿ ಜಿಲ್ಲೆಗಳು ಮಾತ್ರವಲ್ಲ ಕರ್ನಾಟಕ ರಾಜ್ಯದ ಏಳಿಗೆಯ ಮುಖಾಂತರವೇ ರಾಷ್ಟ್ರದ ಉದ್ಧಾರ ಎಂದು ಟೊಂಕ ಕಟ್ಟಿದವರು. ಅವರ ಅಭಿವೃದ್ಧಿಪರ ಮಿಂಚಿನ ಸಾಧನೆಗಳು ಅವಿಭಜಿತ ದ.ಕ. ಜಿಲ್ಲೆಯ ಹೆಜ್ಜೆ ಹೆಜ್ಜೆಗಳಲ್ಲೂ ಸಾಕ್ಷಿ ನೀಡುತ್ತವೆ.