Friday, June 6, 2025

ಮಂಗಳೂರು| ಮದ್ರಸಗಳ ಮಾಹಿತಿ ಸಂಗ್ರಹ ಕಾರ್ಯ ಸ್ಥಗಿತ, ಗೊಂದಲ ಬೇಡ: ಪೊಲೀಸ್ ಆಯುಕ್ತ ಸ್ಪಷ್ಟನೆ

ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಿಯೋಗ ಭೇಟಿ

by eesamachara
0 comment
Police commissioner

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮದ್ರಸಗಳ ಮಾಹಿತಿ ಸಂಗ್ರಹ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ಆತಂಕ, ಗೊಂದಲ ಬೇಡ ಎಂದು ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್ ಸ್ಪಷ್ಟಪಡಿಸಿರುವುದಾಗಿ ದ.ಕ‌ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ.ಕೆ‌ ಶಾಹುಲ್‌ ಹಮೀದ್ ಮಾಹಿತಿ ನೀಡಿದ್ದಾರೆ.

ರಾಜ್ಯ ಗುಪ್ತಚರ ಇಲಾಖೆಯ ಸೂಚನೆ ಮೇರೆಗೆ ಮಂಗಳೂರು ಕಮಿಷನರೇಟ್  ವ್ಯಾಪ್ತಿಯಲ್ಲಿ ಮದ್ರಸಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ಮುಂದಾಗಿರುವುದು ತೀವ್ರ ಚರ್ಚೆಗೆ ಗುರಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯಲು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಿಯೋಗ ಸೋಮವಾರ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದಾಗ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ ಎಂದು ಕೆ.ಕೆ‌ ಶಾಹುಲ್‌ ಹಮೀದ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ‌ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ.ಕೆ‌ ಶಾಹುಲ್‌ಹಮೀದ್, “ಮದ್ರಸಗಳ ಮಾಹಿತಿ ಸಂಗ್ರಹ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ರಾಜ್ಯ ಗುಪ್ತಚರ ಇಲಾಖೆ ನಿರ್ದೇಶಕರು ಸೂಚನೆ ಕೊಟ್ಟಿದ್ದು, ಪೂರ್ತಿ ರಾಜ್ಯದಲ್ಲಿ ಈ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.  ಯಾವುದೇ ಆತಂಕ, ಗೊಂದಲ ಬೇಡ. ಈ ಪ್ರಕ್ರಿಯೆನ್ನು ಮಂಗಳೂರಿನಲ್ಲಿ ಮುಂದುವರಿಸುವುದಿಲ್ಲ” ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

“ಮದ್ರಸಗಳ ಮಾಹಿತಿ ಸಂಗ್ರಹದ ಬಗ್ಗೆ ವಿಚಾರ ನಮ್ಮ ಗಮನಕ್ಕೆ ಬಂದಾಗ ನಾವು ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿ ಮನವರಿಕೆ ಮಾಡಿದ್ದೇವೆ. ಅವರು ಗುಪ್ತಚರ ಸಂಸ್ಥೆಯ ನಿರ್ದೇಶಕರನ್ನು ಸಂಪರ್ಕಿಸಿ ವಿವರಣೆ ಕೇಳಿದ ಬಳಿಕ‌ ಮದ್ರಸಗಳ ಮಾಹಿತಿ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲು‌ ಪೊಲೀಸರಿಗೆ ಸೂಚನೆ ಹೋಗಿದೆ” ಎಂದು ಮಾಹಿತಿ ನೀಡಿದರು.

“ಮದ್ರಸಗಳ ಬಗ್ಗೆ ಮಾಹಿತಿ ಬೇಕಿದ್ದರೆ ಸರ್ಕಾರ ಅಧಿಕೃತವಾಗಿ ವಕ್ಫ್ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳಬಹುದು. ನೋಂದಾಯಿತ ಮದರಸಗಳ ಬಗ್ಗೆ ವಕ್ಫ್ ಇಲಾಖೆಯಲ್ಲಿ ಸಂಪೂರ್ಣ ಮಾಹಿತಿಗಳಿವೆ. ಎಲ್ಲಾ ಮಹಿತಿ ನೀಡಲು ಮಸೀದಿ ಮದರಸ ಆಡಳಿತ ಸಮಿತಿ ಬದ್ಧವಿದೆ” ಎಂದರು.

ನಿಯೋಗದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್‌ ರವೂಫ್, ಲತೀಫ್ ಕಂದಕ್, ಮುಖಂಡರಾದ ಹನೀಫ್ ಹಾಜಿ ಗೋಳ್ತಮಜಲು, ಮುಹಮ್ಮದ್ ಬಪ್ಪಳಿಗೆ, ರಫೀಕ್ ಕಣ್ಣೂರು, ಹೈದರ್ ಬೋಳಾರ, ಹಬೀಬುಲ್ಲಾ ಕಣ್ಣೂರು, ಸಮೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios