Thursday, June 5, 2025

ಕರ್ನಾಟಕ| ಉಪ ಸಮರದ ಫಲಿತಾಂಶ ಕುತೂಹಲಕ್ಕೆ ನಾಳೆ ತೆರೆ

by eesamachara
0 comment
Karnataka Bye Election

ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರಗಳ ಉಪಚುನಾವಣೆಗೆ ನ.13 ರಂದು ಮತದಾನ ನಡೆದಿದ್ದು, ನಾಳೆ (ನ.23 ರಂದು) ಮತ ಎಣಿಕೆ ನಡೆಯಲಿದೆ. ಮೂರು ರಾಜಕೀಯ ಪಕ್ಷಗಳ ನಾಯಕರ ಚಿತ್ತ ನಾಳಿನ ಚುನಾವಣಾ ಫಲಿತಾಂಶದ ಮೇಲೆ ನೆಟ್ಟಿದೆ.

2023ರ ವಿಧಾನಸಭಾ ಚುನಾವಣೆ ಫಲಿತಾಂಶ ಗಮನಿಸಿದರೇ ಎಲ್ಲ ಮೂರು ಪಕ್ಷಗಳು ತಲಾ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮೂಡಿದ್ದು, ಮೂರೂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಎರಡು ಸ್ಥಾನಗಳಲ್ಲಿ ಪ್ರಬಲ ಸ್ಪರ್ಧೆಯಿದ್ದು, ಫಲಿತಾಂಶದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಏನೇ ಇದ್ದರೂ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಉತ್ಸಾಹದಲ್ಲಿದ್ದಾರೆ.

ರಾಜ್ಯದ ಮೂರು ಕ್ಷೇತ್ರಗಳ ಉಪಕದನ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ. ಆಡಳಿತದಲ್ಲಿದ್ದೂ ಉಪಚುನಾವಣೆ ಗೆಲ್ಲದೇ ಹೋದರೆ ದೊಡ್ಡ ಮುಖಭಂಗವಾಗಲಿದೆ. ರಾಜಕೀಯವಾಗಿ ಸೋಲು ಪ್ರತಿಪಕ್ಷಗಳಿಗೆ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡಲು ಅವಕಾಶ ಸಿಕ್ಕಂತಾಗಲಿದೆ.

ಭಾರೀ ಜಿದ್ದಾಜದ್ದಿನ ಪೈಪೋಟಿಗೆ ಕಾರಣವಾಗಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಾತ್ರ ವಿಚಲಿತರಾಗಿಲ್ಲ. ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಕ್ಷೇತ್ರದ ಕುರಿತು, ಮತದಾರರ ಒಲವು, ನಿಲುವುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿರುವ ಯೋಗೇಶ್ವರ್ ಗೆಲುವು ತಮ್ಮದೇ ಎನ್ನುತ್ತಿದ್ದಾರೆ.

ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕುಮಾರಸ್ವಾಮಿ ವಿರುದ್ಧ ಆಡಿದ ಮಾತುಗಳು, ಹೇಳಿಕೆಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದೆಯೇ, ಅದು ನಿಖಿಲ್ ಅಥವಾ ಯೋಗೇಶ್ವರ್ ಅವರಿಗೆ ಒಲವು ತೋರಿದೆಯೇ ಎಂಬುದು ಫಲಿತಾಂಶದ ನಂತರ ತಿಳಿಯಲಿದೆ.

ಚನ್ನಪಟ್ಟಣದಲ್ಲಿ ಈ ಸಲದ ಮತ ಪ್ರಮಾಣ ಶೇ 88.81 ತಲುಪುವುದರೊಂದಿಗೆ ದಾಖಲೆ ಬರೆದಿದೆ. ಉಪ ಸಮರದ ಮತಹಬ್ಬದಲ್ಲಿ ಮತದಾರರು ತೋರಿರುವ ಉತ್ಸಾಹವು ಯಾರಿಗೆ ಪಾಸಿಟಿವ್, ಯಾರಿಗೆ ನೆಗೆಟಿವ್‌ ಆಗಲಿದೆ ಎಂಬುದರ ಚರ್ಚೆಯೂ ಗರಿಗೆದರಿದೆ. ಉಪ ಚುನಾವಣೆಯಲ್ಲಿ ಫಲಿತಾಂಶದ ಕುರಿತು ನಡೆಯುತ್ತಿರುವ ಬೆಟ್ಟಿಂಗ್ ನಿಖಿಲ್ ಅಥವಾ ಯೋಗೇಶ್ವರ್ ಗೆಲುವಿಗಷ್ಟೇ ಸೀಮಿತವಾಗಿಲ್ಲ. ಅವರು ಎಷ್ಟು ಮತಗಳನ್ನು ಪಡೆಯಲಿದ್ದಾರೆ? ಎಷ್ಟು ಲೀಡ್‌ನಿಂದ ಗೆಲ್ಲುತ್ತಾರೆ ಎಂಬುದರ ಕುರಿತು ಸಹ ಬೆಟ್ಟಿಂಗ್‌ ಪ್ರಿಯರು ಹಣ ಹೂಡುತ್ತಿದ್ದಾರೆ.

ಇನ್ನೂ ಸಂಡೂರಿನಲ್ಲಿ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವನ್ನು ಕಾಂಗ್ರೆಸ್ ಲಾಭವಾಗಿಸಿಕೊಂಡಿದೆ. ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಂಡೂರು ಉಪ ಚುನಾವಣೆ ಗೆಲ್ಲುವ ಜವಾಬ್ದಾರಿಯನ್ನು ನೀಡಿತ್ತು. ಆದರೆ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಸ್ಥಳೀಯ ಕೆಲ ಮುಖಂಡರ ಮನಗೆದ್ದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಳ್ಳಾರಿ ಸಂಸದ ಇ.ತುಕಾರಾಂ ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಅವರಿಗೆ ಇದು ವರವಾಗಿದೆ ಎನ್ನಲಾಗುತ್ತಿದೆ. ಬಿಜೆಪಿಯ ಬಂಗಾರು ಹನುಮಂತು ಪ್ರಬಲ ಪೈಪೋಟಿ ನೀಡಿದ್ದರೂ ಅನ್ನಪೂರ್ಣ ಅವರು ಫೇವರಿಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಗ್ಗಾಂವಿಯಲ್ಲಿ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆದಿದ್ದರಿಂದ ಪರಿಸ್ಥಿತಿ ಕಾಂಗ್ರೆಸ್ ಪರವಾಗಿ ತಿರುಗಿದೆ ಎಂದು ಹೇಳಲಾಗುತ್ತಿದೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios