ಮೈಸೂರು: ನಾನು ಅವರನ್ನು ಎಂದೂ ಕುಳ್ಳ ಎಂದು ಕರೆದಿಲ್ಲ ಎಂದು ಸಚಿವ ಝಮೀರ್ ಅಹ್ಮದ್ ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚಾಮುಂಡಿ ತಾಯಿ ಮುಂದೆ ನಿಂತು ಹೇಳುತ್ತಿದ್ದೇನೆ. ಬಸವರಾಜ ಹೊರಟ್ಟಿ ಒಮ್ಮೆ ನನ್ನನ್ನು ಆತ್ಮೀಯತೆಯಿಂದ ‘ಏ ಕುಮಾರ’ ಎಂದು ಕರೆದಾಗ ಇದೇ ಜಮೀರ್ ಅವರನ್ನು ಹೊಡೆಯಲು ಹೋಗಿದ್ದರು. ಕರಿಯ, ಕುಳ್ಳ ಎಂದು ಮಾತಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನನ್ನ ಜಮೀರ್ ಆತ್ಮೀಯತೆ ಕೇವಲ ರಾಜಕೀಯವಾಗಿ ಮಾತ್ರ” ಎಂದು ಹೇಳಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಮೀರ್ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂಥ ಮಾತು ಹೇಳಿದವರ ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಈ ಸರ್ಕಾರ? ಈಗೇಕೆ ಸುಮ್ಮನೆ ಇದೆ?” ಎಂದು ಪ್ರಶ್ನಿಸಿದರು.
“ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದವಿದೆ, ಉತ್ತಮವಾದ ರೀತಿಯಲ್ಲಿ ಗೆಲುವು ಸಾಧಿಸುತ್ತೇವೆ. ಜಮೀರ್ ಹೇಳಿಕೆಯಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ, ನಾವು ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.