ಅಡ್ಡೂರು: ಯಾವುದೇ ದೊಡ್ಡ ಮಟ್ಟದ ಯೋಜನೆ ರೂಪಿಸಲು ಗುರಿ ಮುಖ್ಯ. ಇದು ಸಾಧಿಸಲು ವಿಳಂಬವಾದರೂ ಯಶಸ್ಸು ಖಂಡಿತ ಲಭಿಸಲಿದೆ ಎಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ, ಉದ್ಯಮಿ ಎಂ.ಎಸ್ ಹಿದಾಯತ್ ಅಡ್ಡೂರು ಕಿವಿ ಮಾತು ಹೇಳಿದ್ದಾರೆ.
ರವಿವಾರ ಇಲ್ಲಿನ ಎಫ್.ಸಿ.ಕೆ (ರಿ.) ಕೆಳಗಿನಕರೆ ಇದರ ಮಾಸಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಎಲ್ಲ ಸಂಘ-ಸಂಸ್ಥೆಗಳು ಸಮನ್ವತೆಯಿಂದ ಕೆಲಸ ಮಾಡಿದರೆ ಅಡ್ಡೂರಿನ ಅಭಿವೃದ್ಧಿಗೆ ಪೂರಕವಾಗಲಿದೆ. ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಅಡ್ಡೂರು ಜನತೆಯ ಸಹಕಾರ, ಬೆಂಬಲದಿಂದ ನಾನು ಸಮಾಜ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಾಯಿತು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಲು ಕೆಳಗಿನಕೆರೆಯ ಹಿರಿಯರು ನೀಡಿದ ಪ್ರೋತ್ಸಾಹದ ಬಗ್ಗೆ ಸ್ಮರಿಸಿದರು.
ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಡ್ಡೂರಿಗರನ್ನು ಒಟ್ಟು ಸೇರಿಸಿ ‘ಅಡ್ಡೂರು ಫೆಸ್ಟ್’ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದ್ದು, ಇದು ಗ್ರಾಮದ ಸರ್ವಾಂಗೀಣ ಏಳಿಗೆಗೆ ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ಜಬ್ಬಾರ್ ಕೆಳಗಿನಕೆರೆ, ಸಿದ್ದೀಕ್ ಕೆಳಗಿನಕೆರೆ, ಯಾಕೂಬ್ ಕೆಳಗಿನಕೆರೆ, ಹಮೀದ್ ಕೆಳಗಿನಕೆರೆ ಮತ್ತಿತರರು ಉಪಸ್ಥಿತರಿದ್ದರು. ಎಫ್.ಸಿ.ಕೆ ಅಧ್ಯಕ್ಷ ಹಂಝ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಸ್ವಾಗತಿಸಿದರು.




