ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನೀಡಿದ ದೂರಿನ ಅನ್ವಯ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದ ನಿವೇಶನ ಕ್ರಯಪತ್ರದ ಮುದ್ರಾಂಕ ಶುಲ್ಕದ ಬಗ್ಗೆ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು, ಸಿಎಂ ವಿರುದ್ಧ ಪ್ರತಿ ನಿತ್ಯ ಒಂದಲ್ಲೊಂದು ಆರೋಪ ಮಾಡಿ ಒತ್ತಡ ತಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೇವರಾಜ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಣ್ ದೂರು ನೀಡಿದ್ದರು.
.“ಸಿಎಂ ಸಿದ್ದರಾಮಯ್ಯ ವಿರುದ್ಧ ತೇಜೋವಧೆ ಮಾಡುವುದಲ್ಲದೆ ಜನಸಾಮಾನ್ಯರಲ್ಲಿ ತಪ್ಪು ಕಲ್ಪನೆ ಮತ್ತು ತಪ್ಪಿತಸ್ಥರು ಎಂದು ಬಿಂಬಿಸುವ ಕೆಲಸವನ್ನು ಕಳೆದ 2 ತಿಂಗಳುಗಳಿಂದ ಸ್ನೇಹಮಯಿ ಕೃಷ್ಣರವರು ಮಾಡುತ್ತಿದ್ದಾರೆ. ಇದಲ್ಲದೆ ಇವರು ಮತ್ತು ಟಿ.ಜೆ ಅಬ್ರಹಾಂ ರವರು ನ್ಯಾಯಲಯದ ಮೊರೆ ಹೋಗಿ ಮುಡಾ ವಿಚಾರಕ್ಕೆ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಕೋರಿಕೊಂಡಿದ್ದರಿಂದ ನ್ಯಾಯಲಯ ಲೋಕಾಯುಕ್ತ ತನಿಖೆ ನಡೆಸಲು ಆದೇಶ ಮಾಡಿದೆ. ಅದರಂತೆ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಆದರೆ ಸ್ನೇಹಮಯಿ ಕೃಷ್ಣರವರು ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯುತ್ತಿಲ್ಲವೆಂದು ಮತ್ತು ತನಿಖಾಧಿಕಾರಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ದೂರನ್ನು ನೀಡುವುದಲ್ಲದೆ, ತನಿಖಾಧಿಕಾರಿಯವರಿಗೆ ದಿನನಿತ್ಯ ಬ್ಲಾಕ್ಮೇಲ್ ಮತ್ತು ಒತ್ತಡ ಹೇರಲಾಗುತ್ತಿದೆ. ತನಿಖೆಯ ವರದಿಯನ್ನು ನ್ಯಾಯಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಇನ್ನೂ ಸಲ್ಲಿಸಲಿಲ್ಲ. ತನಿಖೆ ಇನ್ನು ವಿಚಾರಣೆ ಹಂತದಲ್ಲಿರುವಾಗ ತನಿಖೆ ಸರಿಯಿಲ್ಲ” ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.