ಅಡ್ಡೂರು: ಎಸ್ಕೆಎಸ್ಸೆಸೆಫ್ ಕೆಳಗಿನಕೆರೆ ಯುನಿಟ್ ವತಿಯಿಂದ ‘ಇಸ್ಲಾಮಿನ ಮಾಧುರ್ಯ’ ಕಾರ್ಯಕ್ರಮ ಕೆಳಗಿನಕೆರೆಯ ಅಲ್ ಮದ್ರಸತುಲ್ ಬದ್ರಿಯಾ ಸಭಾಂಗಣದಲ್ಲಿ ರವಿವಾರ ಜರಗಿತು.
ದುವಾಶೀರ್ವಚನ ನೀಡಿ ಕಾರ್ಯಕ್ರಮ ಉದ್ಘಾಟಿಸಿದ ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಸ್ಟರ್ ಅಧ್ಯಕ್ಷ ಶರೀಫ್ ಅರ್ಶದಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಡ್ಡೂರು ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಖತೀಬ್ ಸದಕತುಲ್ಲ ಫೈಝಿ, “ಹೊಸ ತಲೆಮಾರಿನ ಯುವಕರಿಗೆ ಭೌದ್ಧಿಕವಾಗಿ ಇಸ್ಲಾಮಿನ ಬಗ್ಗೆ ಅರಿವು ಮೂಡಿಸಲು ಮತ್ತು ಅವರ ಸಂಶಯಾಸ್ಪದ ಪ್ರಶ್ನೆಗಳನ್ನು ನಿವಾರಣೆಗೊಳಿಸುವ ದೃಷ್ಟಿಯಿಂದ ಎಸ್ಕೆಎಸ್ಸೆಸೆಫ್ ವತಿಯಿಂದ ರಾಜ್ಯಾದ್ಯಂತ ವಿವಿಧ ಶಾಖೆ-ಘಟಕಗಳಲ್ಲಿ “ಇಸ್ಲಾಮಿನ ಮಾಧುರ್ಯ” ವಿಷಯದ ಕುರಿತಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಯುವಕ-ಯುವತಿಯರು ಆಧುನಿಕ ಶೈಲಿಯ ಜೀವನ, ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರು ಹೋಗಿದ್ದು, ವಿವಿಧ ಪ್ರಲೋಬನೆಗೆ ಒಳಗಾಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
“ಈಮಾನಿನ ರುಚಿ ಅನುಭವಿಸಿದ ವ್ಯಕ್ತಿ ಯಾವುದೇ ಸಂದಿಗ್ಧ ಪರಿಸ್ಥಿಯಲ್ಲಿ ಇಸ್ಲಾಂ ಅನ್ನು ಬಿಟ್ಟುಕೊಡುವುದಿಲ್ಲ. ಇಸ್ಲಾಮಿಗೆ ಭೌದ್ಧಿಕ, ಮಾನಸಿಕ, ಆತ್ಮೀಯವಾದ ಮಾಧುರ್ಯ ಇದೆ. ಪ್ರತಿಯೊಬ್ಬರು ಅಲ್ಲಾಹ್ ಗೆ ಹತ್ತಿರವಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ತೃಪ್ತಿಪಡೆದುಕೊಳ್ಳಬೇಕು” ಎಂದು ಕರೆ ನೀಡಿದ ಅವರು, ಈಮಾನಿನ ರುಚಿ ಅನುಭವಿಸಬೇಕಾದ ರೀತಿ ಹಾಗೂ ಅಲ್ಲಾಹ್ ನನ್ನು ಪ್ರೀತಿಸುವ ಮಾರ್ಗಗಳ ಕುರಿತು ಉಪದೇಶ ನೀಡಿದರು.
ಬಳಿಕ ಕಾರ್ಯಕರ್ತರಿಗೆ 2024-26ನೇ ಸಾಲಿನ ಸದಸ್ಯತ್ವ ಕಾರ್ಡ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಜಮಾಲುದ್ದೀನ್ ದಾರಿಮಿ, ಕೆಳಗಿನಕೆರೆ ಮದ್ರಸ ಮುಅಲ್ಲಿಮ್ ಇಬ್ರಾಹೀಂ ದಾರಾನಿ ಉಸ್ತಾದ್, ಕೆಳಗಿನಕೆರೆ ಶಾಖೆಯ ಸ್ಥಾಪಕಾಧ್ಯಕ್ಷ ಅಕ್ಬರ್ ಅಲಿ ಮಾತನಾಡಿದರು. ಎಸ್ಕೆಎಸ್ಸೆಸೆಫ್ ಕೆಳಗಿನಕೆರೆ ಯುನಿಟ್ ಅಧ್ಯಕ್ಷ ಅಸ್ಬಾಕ್ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸೆಫ್ ಕೈಕಂಬ ವಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಞಿ ಮಾಸ್ಟರ್, ಖಜಾಂಚಿ ಸಮೀರ್ ನೂಯಿ, ಹಿರಿಯ ಸದಸ್ಯರಾದ ಜಬ್ಬಾರ್ ಕೆಳಗಿನಕೆರೆ ಹಾಗೂ ಯಾಕೂಬ್ ಕೆಳಗಿನಕೆರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸೆಫ್ ಕೆಳಗಿನಕೆರೆ ಯುನಿಟ್ ಕಾರ್ಯದರ್ಶಿ ಸುಹೈಲ್ ಸ್ವಾಗತಿಸಿ, ವಂದಿಸಿದರು.





