ಬೆಂಗಳೂರು: ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಗುರುವಾರ ಸಂಜೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ರಾಜಕೀಯ ಸಂಘರ್ಷ ಅಂತ್ಯ ಕಂಡಿದೆ.
ನಗರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಮ್ಮುಖದಲ್ಲ ನಡೆದ ಪುತ್ತಿಲರ ಜೊತೆಗಿನ ಸಂಧಾನ ಯಶಸ್ವಿಯಾಗಿದ್ದು, ಬಿಜೆಪಿಗೆ ಮರು ಸೇರ್ಪಡೆಯಾಗಲು ಪುತ್ತಿಲ ಒಪ್ಪಿಗೆ ನೀಡಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ನೇತೃತ್ವದ ನಿಯೋಗ ಅರುಣ್ ಪುತ್ತಿಲ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ನಾಳೆ (ಮಾರ್ಚ್ 15) ಅರುಣ್ ಪುತ್ತಿಲ ಅವರು ಮಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಸಂಧಾನ ಸಭೆಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತಿಲ ಪರಿವಾರದ ಪ್ರಮುಖ ಪ್ರಸನ್ನ ಮಾರ್ತಾ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಮತ್ತಿತರರಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್, ಪುತ್ತಿಲ ಪರಿವಾರ ಮೋದಿ ಪರಿವಾರದ ಜೊತೆಗೆ ಇರಬೇಕೆಂದು ನಿಶ್ಚಯ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಅಭ್ಯರ್ಥಿಯ ಗೆಲುವುಗಾಗಿ ಶ್ರಮಿಸುತ್ತಾರೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷ ಸೂಕ್ತವಾದ ಸ್ಥಾನಮಾನ ಸಿಗಲಿದೆ. ನಮ್ಮ ರಾಜ್ಯ-ರಾಷ್ಟ್ರೀಯ ನಾಯಕರು ಬಂಡಾಯ ಎದ್ದವರ ಜೊತೆಗೆ ಸಂಪರ್ಕದಲ್ಲಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿವಾರದಲ್ಲಿ ಒಡಕು: ಇನ್ನು ಪುತ್ತಿಲ ಪರಿವಾರದ ನಡೆಯ ಹಿನ್ನೆಲೆಯಲ್ಲಿ ಅಲ್ಲಿದ್ದ ನಾಯಕರ ಮಧ್ಯೆ ಒಡಕು ಉಂಟಾಗಿದ್ದರಿಂದ ಪ್ರಮುಖ ನಾಯಕ ರಾಜಾರಾಮ್ ಹೊರ ಬಂದಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ಪೋಸ್ಟ್ ಮಾಡಿ, ನಾನು ಇನ್ನು ಯಾವುದೇ ಪಕ್ಷ, ಸಂಘ, ಪರಿವಾರದ ವಕ್ತಾರ ಅಲ್ಲ ಎಂದು ಪರಿವಾರದಲ್ಲಿ ನಡೆದ ಘಟನೆಗಳ ಕುರಿತು ಬುಧವಾರ ಅಸಮಾಧಾನ ಹೊರ ಹಾಕಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಿದ್ದರು. ಪುತ್ತಿಲ ಸ್ಪರ್ಧೆಯಿಂದ ಭದ್ರಕೋಟೆಯಲ್ಲಿಯೇ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು.