ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಮುಖಂಡರು ಜಗದೀಶ್ ಶೆಟ್ಟರ್ ನಿವಾಸಕ್ಕೆ ದೌಡಾಯಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದು, ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ಶೆಟ್ಟರ್ ನಿವಾಸಕ್ಕೆ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿ ಮಾತುಕತೆ ನಡೆಸಿ ಮನವೊಲಿಸುವ ಯತ್ನ ಮಾಡಿದ್ದರು. ಆದರೆ ಮಾತುಕತೆ ಮುರಿದು ಬಿದ್ದ ಬಳಿಕ ಜಗದೀಶ್ ಶೆಟ್ಟರ್ ಇಂದು ರಾತ್ರಿ ಸುದ್ದಿಗೋಷ್ಠಿ ನಡೆಸಿ, ಶಾಸಕ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದರು.
“ನಾಳೆ( ಎ.16) ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡುತ್ತೇನೆ. ನಂತರ ನನ್ನ ಹಿತೈಷಿಗಳ ಜೊತೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನಗೆ 15 ದಿನದ ಮೊದಲೇ ಹೇಳಿದ್ದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ. ಇಲ್ಲಿಯವರೆಗೆ ಮುಚ್ಚಿಟ್ಟು ಈಗ ಟಿಕೆಟ್ ಕೊಟ್ಟಿಲ್ಲ. ಅದಕ್ಕಾಗಿ ಹೃದಯ ಪೂರ್ವಕವಾಗಿ ಬಿಜೆಪಿ ವಿದಾಯ ಹೇಳುತ್ತಿದ್ದೇನೆ” ಎಂದು ಹೇಳಿದರು.
“ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಪಕ್ಷೇತರನಾಗಿ ಸ್ಪರ್ಧಿಸಬೇಕೋ ಅಥವಾ ಬೇರೆ ನಿರ್ಧಾರ ಕೈಗೊಳ್ಳಬೇಕೋ ಎಂಬುದರ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ನಾಳೆ ತೀರ್ಮಾನ ಮಾಡುತ್ತೇನೆ” ಎಂದರು.
“ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನನ್ನದು ಯಾವುದೇ ಭ್ರಷ್ಟಾಚಾರ, ಸಿಡಿಯೂ ಇಲ್ಲ. ಹೈಕಮಾಂಡ್ ಸರ್ವೆ ವರದಿಯೂ ಸಹ ನನ್ನ ಪರ ಬಂದಿದೆ. ಆದರೂ ನನಗೆ ಇನ್ನೂ ಟಿಕೆಟ್ ನೀಡದಿರುವುದು ಅಚ್ಚರಿ ತಂದಿದೆ. ನಾನು ಶಿಸ್ತಿನ ರಾಜಕಾರಣಿಯಾದರೂ ಟಿಕೆಟ್ ಘೋಷಿಸಿಲ್ಲ” ಎಂದು ಭಾವುಕರಾದರು.
“ನನ್ನ ವಿರುದ್ದ ಕುತಂತ್ರ, ಷಡ್ಯಂತ್ರ ನಡೆದಿದೆ. ನನ್ನ ಈ ರೀತಿ ಟ್ರಿಟ್ ಮಾಡಿರುವುದು ನನಗೆ ಶಾಂಕಿಂಗ್. ಬಿಜೆಪಿ ಮೊದಲಿನ ಬಿಜೆಪಿಯಾಗಿ ಉಳದಿಲ್ಲ. ಬಿಜೆಪಿ ಕೆಲವು ವ್ಯಕ್ತಿಗಳಿಂದ ಹಾಳಾಗುತ್ತಿದೆ. ಸ್ವಂತ ಹಿತಾಸಕ್ತಿಗಾಗಿ ಪಕ್ಷ ಹಾಳಾಗುತ್ತಿದೆ” ಎಂದು ಹೆಸರು ಹೇಳದೇ ಬಿಜೆಪಿಯ ನಾಯಕರ ವಿರುದ್ಧ ಕಿಡಿಕಾರಿದರು.