ನವದೆಹಲಿ: ಕರ್ನಾಟಕ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಗುರುವಾರ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ದಾರೆ.
“ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಏಕೈಕ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಿರ್ಧಾರವನ್ನು ಎಐಸಿಸಿ ತೆಗೆದುಕೊಂಡಿದೆ. ಮೇ.20ರಂದು ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮಧ್ಯಾಹ್ನ ಪದಗ್ರಹಣ ಸಮಾರಂಭ ನಡೆಯಲಿದೆ” ಎಂದು ವೇಣುಗೋಪಾಲ್ ಮಾಹಿತಿ ನೀಡಿದರು.
“ನಮ್ಮದು ಪ್ರಜಾಪ್ರಭುತ್ವ ಪದ್ಧತಿ ಅನುಸರಿಸುವ ಪಕ್ಷ. ಕರ್ನಾಟಕದಲ್ಲಿ ನಮ್ಮಲ್ಲಿ ಅತ್ಯುತ್ತಮ ನಾಯಕರಿದ್ದಾರೆ. ಒಮ್ಮತಕ್ಕೆ ಬರಲು ನಾವು ಎರಡು-ಮೂರು ದಿನ ಮಾತುಕತೆ ನಡೆಸಬೇಕಾಯಿತು. ಸಿದ್ದರಾಮಯ್ಯ ಅತ್ಯುತ್ತಮ ಆಡಳಿತಗಾರ. ಈ ಬಾರಿಯ ಚುನಾವಣೆಯಲ್ಲಿ ಅವರು ಸಾಕಷ್ಟು ಶ್ರಮಪಟ್ಟರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಅತ್ಯುತ್ತಮ ಸಂಘಟಕರು” ಎಂದವರು, “ಕರ್ನಾಟಕದಲ್ಲಿ ನಾವು ಜಯಗಳಿಸಿದ್ದೇವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಪರಿಶ್ರಮ ಈ ಜಯದಲ್ಲಿದೆ. ಸೋನಿಯಾ ಗಾಂಧಿ ಅವರ ಮಾರ್ಗದರ್ಶನವು ನಮ್ಮ ಕಾರ್ಯಕರ್ತರಿಗೆ ಬಲತುಂಬಿತು” ಎಂದು ಸ್ಮರಿಸಿದರು.
ರಣದೀಪ್ ಸುರ್ಜೆವಾಲಾ ಮಾತನಾಡಿ, “ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಮುಖ್ಯಮಂತ್ರಿಯಾಗಲು ಅರ್ಹರು. ಆದರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರ ನೇತೃತ್ವದಲ್ಲಿ ಕಾಂಗ್ರೆಸ್ ಬ್ರ್ಯಾಂಡ್ ಕರ್ನಾಟಕ ನಿರ್ಮಾಣ ಮಾಡಲಿದೆ” ಎಂದು ಹೇಳಿದರು.