ಮಂಗಳೂರು: 2016ರ ಮಾರ್ಚ್ 21ರಂದು ನಗರದ ಕೊಡೇಲ್ಬೈಲ್ನಲ್ಲಿ ನಡೆದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2024ರ ಜನವರಿ 16,17 ಮತ್ತು 18ರಂದು ಮುಂದೂಡಿ ಮಂಗಳವಾರ ಆದೇಶಿಸಿದೆ.
(ನ.27) ಸೋಮವಾರ ಮೊದಲ ದಿನ ವಿನಾಯಕ ಬಾಳಿಗಾರ ಮನೆಯ ಪಕ್ಕದ ನಿವಾಸಿ ಡಾ.ಸುಬ್ರಾಯ ಪೈ, ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗಾ ಮತ್ತು ಹರ್ಷಾ ವಿ ಬಾಳಿಗಾ ಅವರು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಎರಡನೇ ದಿನ (ನ.28) ಮಂಗಳವಾರವೂ ವಿನಾಯಕ ಬಾಳಿಗಾರ ಸಹೋದರಿ ಅನುರಾಧ ಬಾಳಿಗಾ ಅವರಿಂದ ಮತ್ತಷ್ಟು ಮಾಹಿತಿಯನ್ನು ನ್ಯಾಯಾಲಯವು ಪಡೆದಿದೆ ಎಂದು ತಿಳಿದು ಬಂದಿದೆ.
ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದಿಂದ ಬೆಂಗಳೂರಿನ ಹಿರಿಯ ನ್ಯಾಯವಾದಿ ಎಸ್.ಬಾಲಕೃಷ್ಣನ್ ಅವರನ್ನು ಸರಕಾರಿ ವಿಶೇಷ ಅಭಿಯೋಜಕರನ್ನಾಗಿ ಈಗಾಗಲೇ ನೇಮಕ ಮಾಡಲಾಗಿದೆ. ವಿನಾಯಕ ಬಾಳಿಗಾ ಹತ್ಯಾ ಪ್ರಕರಣದ ವಿಚಾರಣೆ ಈ ವರ್ಷ ಎರಡನೇ ಬಾರಿ ನಡೆದಿದೆ. ಕಳೆದ ಜನವರಿ 3 ಮತ್ತು 4ರಂದು ಮೊದಲ ಬಾರಿ ಸಾಕ್ಷಿದಾರರ ವಿಚಾರಣೆ ನಡೆದಿದ್ದು, ವಿಚಾರಣೆಯಲ್ಲಿ 11 ಮಂದಿ ಸಾಕ್ಷಿದಾರರ ಹೇಳಿಕೆಯನ್ನು ಪಡೆಯಲಾಗಿತ್ತು.
ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರಿ ಅನುರಾಧಾ ಬಾಳಿಗಾ ನೀಡಿದ ದೂರಿನಂತೆ ನಮೋ ಬ್ರಿಗೇಡ್ನ ಮುಖ್ಯಸ್ಥ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶ್ಚಿತ್ ದೇವಾಡಿಗ, ಶೈಲೇಶ್, ಮಂಜುನಾಥ್ ಶೆಣೈ, ವಿಶ್ಲೇಶ್ ನಾಯಕ್ ಎಂಬವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಂ ಬಂಧನ ವಿಧಿಸಲಾಗಿತ್ತು. ಬಳಿಕ ಆರೋಪಿಗಳು ಜಾಮೀನು ಮೂಲಕ ಹೊರಬಂದಿದ್ದರು. ಆರೋಪಿಗಳ ಪೈಕಿ ವಿಪ್ಪೇಶ್ ನಾಯಕ್ ಎಂಬಾತನ ಮೃತದೇಹ 2020ರ ನವೆಂಬರ್ನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.