Friday, June 6, 2025

ಬಡವರು, ಅವಕಾಶ ವಂಚಿತರ ಸೇವೆ ಮಾಡುವುದೇ ನಿಜವಾದ ಅಭಿವೃದ್ಧಿ: ಸಚಿವ ಕೃಷ್ಣ ಬೈರೇಗೌಡ

by eesamachara
0 comment

ಮಂಗಳೂರು: ಕೆಲವರು ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿದೆಂದು ಮಾತನಾಡುತ್ತಾರೆ. ಆದರೆ, ಬಡವರ ಸಮಸ್ಯೆ, ಜೀವನದ ಕಷ್ಟ ಅರ್ಥ ಮಾಡಿಕೊಳ್ಳದವರು ಮಾತ್ರವೇ ಇಂತಹ ಮಾತುಗಳನ್ನಾಡಲು ಸಾಧ್ಯ. ಅವಕಾಶ, ಅಭಿವೃದ್ಧಿಗಳಿಂದ ವಂಚಿತರಾದವರು ಹಾಗೂ ಬಡವರಿಗೆ ಸಹಾಯ ಮಾಡುವುದೇ ಅಭಿವೃದ್ಧಿ. ಇದಕ್ಕಿಂತ ದೊಡ್ಡ ಅಭಿವೃದ್ಧಿ ಯಾವುದೂ ಇಲ್ಲ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಮಂಗಳವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದ ಅವರು, “ಆಡಳಿತ ವ್ಯವಸ್ಥೆ ಕುಸಿತದಿಂದ ಹಾಗೂ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸದಿರುವುದರಿಂದ ಜನರು ಸಮಸ್ಯೆಗಳನ್ನು ಎದರಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರುತ್ತೇನೆ.  ಅಧಿಕಾರಿಗಳೊಂದಿಗೆ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿರುವ ಕೆಲವೊಂದು ವಿಶಿಷ್ಟ ಸಮಸ್ಯೆಗಳ ಬಗ್ಗೆ  ಗಮನ ಹರಿಸಿದ್ದೇನೆ.  ಸರಕಾರ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ” ಎಂದು  ಭರವಸೆ ನೀಡಿದರು.

“ಪಕ್ಷ ಸಂಘಟನೆ, ಕಾರ್ಯಕರ್ತರ ಹಿತವೂ ಮುಖ್ಯ. ಆದರೆ ಮತ ಹಾಕಿರುವವರ ನಿರೀಕ್ಷೆ ಈಡೇರಿಸುವುದು ಅತೀ ಮುಖ್ಯ. ಮುಖ್ಯಮಂತ್ರಿಯವರು ಹೇಳಿದಂತೆ ಜನಪರ ಆಡಳಿತ ನೀಡಬೇಕು. ಬಿಜೆಪಿಯವರ ದುರಾಡಳಿತದಿಂದ ಬೇಸತ್ತು ಮತ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತಹ ಕಾರ್ಯನಿರ್ವಹಿಸಲು ಪ್ರಯತ್ನ ಮಾಡುತ್ತೇನೆ” ಎಂದರು.

“ಕಾಂಗ್ರೆಸ್ ಸರಕಾರ ಆಡಳಿತ ಆರಂಭಿಸಿ 100 ದಿನಗಳಾಗಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ಯಾವುದೇ ರಾಜ್ಯ ಸರಕಾರ ಮಾಡಲು ಸಾಧ್ಯವಾಗದ ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.  5 ವರ್ಷಗಳು ಕಳೆದರೂ  ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ಟೀಕಿಸಿದ್ದರು. ಜನಸಾಮಾನ್ಯರಿಗೂ ಅನುಮಾನವಿತ್ತು. ಆದರೆ ಸರಕಾರ ಕ್ರಾಂತಿಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದು ದೊಡ್ಡ ಸಾಧನೆ.  ಬಡವರಿಗೆ ಸರಕಾರ ನೀಡುವ 52 ಸಾವಿರ ಕೋಟಿ ರೂ.ಗಳಿಂದ 2.50 ಲಕ್ಷ ಕೋಟಿ ರೂ. ಆರ್ಥಿಕ ಉತ್ಪನ್ನ ಸೃಷ್ಟಿಯಾಗುತ್ತದೆ” ಎಂದು ತಿಳಿಸಿದರು.

ಇದೇ ವೆಳೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕ ಅಶೋಕ್ ಕುಮಾರ್ ರೈ, ಇಬ್ರಾಹೀಂ ಕೋಡಿಜಾಲ್,  ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ಹೇಮನಾಥ್ ಶೆಟ್ಟಿ ಕಾವು, ಪ್ರಕಾಶ್ ಶೆಟ್ಟಿ ತುಂಬೆ, ಲಾರೆನ್ಸ್ ಡಿಸೋಜ,  ಶುಭಾಷ್ ಚಂದ್ರ ಕೊಲ್ನಾಡ್, ಬಿ.ಎಂ.ಅಬ್ಬಾಸ್ ಅಲಿ, ಶೇಖರ್ ಕುಕ್ಕೇಡಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್, ಸುರೇಂದ್ರ ಕಾಂಬ್ಳಿ, ವಸಂತ್ ಬೆರ್ನಾಡ್, ಜೆ.ಅಬ್ದುಲ್ ಸಲೀಂ, ಬೇಬಿ ಕುಂದರ್, ಸರ್ವೋತ್ತಮ ಗೌಡ,  ಸುಹಾನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios