ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ 14 ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ (Supreme Court)ಗೆ ಅರ್ಜಿ ಸಲ್ಲಿಸಿದ್ದು, ಏ.5ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಶುಕ್ರವಾರ ಹೇಳಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಜಗಮ್, ರಾಷ್ಟ್ರೀಯ ಜನತಾ, ಜೆಡಿಯು ಸಿಪಿಎಂ, ಸಮಾಜವಾದಿ ಪಕ್ಷ ಸೇರಿದಂತೆ 14 ವಿಪಕ್ಷಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವಂತೆ ಸಿಜೆಐ ಡಿ.ವೈ ಚಂದ್ರಚೂಡ್ (D.Y.Chandrachud) ನೇತೃತ್ವದ ಪೀಠದ ಮುಂದೆ ಮನವಿ ಮಾಡಿದರು.
ನ್ಯಾಯಾಲಯದಲ್ಲಿ ವಾದಿಸಿದ ಅಭಿಷೇಕ್ ಮನು ಸಿಂಘ್ವಿ, ಸಿಬಿಐ, ಇಡಿಯನ್ನು ಸಂಪೂರ್ಣವಾಗಿ ನಮ್ಮ ವಿರುದ್ಧ ಬಳಸಲಾಗುತ್ತಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳ 95 ಪ್ರತಿಶತ ತನಿಖೆಗಳು ವಿರೋಧ ಪಕ್ಷಗಳ ನಾಯಕರ ವಿರುದ್ಧವಾಗಿವೆ. ವಿರೋಧ ಪಕ್ಷದಲ್ಲಿದ್ದವರು ಬಿಜೆಪಿಗೆ ಸೇರಿದ ನಂತರ ಆ ನಾಯಕರ ಮೇಲಿನ ಪ್ರಕರಣಗಳನ್ನು ಆಗಾಗ್ಗೆ ಕೈಬಿಡಲಾಗುತ್ತದೆ. ರಾಜಕೀಯ ವಿರೋಧಿಗಳನ್ನು ಧ್ವನಿ ಅಡಗಿಸಲು ತನಿಖಾ ಸಂಸ್ಥೆಗಳನ್ನು ಸಂಪೂರ್ಣ ದುರ್ಬಳಕೆ ಮಾಡುತ್ತಿದೆ. ಆದುದರಿಂದ ಬಂಧನ ಪೂರ್ವ ಹಾಗೂ ಬಂಧನ ನಂತರದಲ್ಲಿ ಜಾಮೀನಿಗಾಗಿ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು. ಈ ನಿಟ್ಟಿನಲ್ಲಿ ತುರ್ತು ವಿಚಾರಣೆ ನಡೆಸಬೇಕು ಎಂದು ಮಾಡಿದರು.
ವಾದ ಆಲಿಸಿದ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ತುರ್ತು ವಿಚಾರಣೆ ಸಾಧ್ಯವಿಲ್ಲ. ಏಪ್ರಿಲ್ 5 ರಂದು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು.